ಚಾಮರಾಜನಗರ, ಏ.9 www.bengaluruwire.com : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟು ಒಂದೂವರೆ ತಾಸು ಸುಮಾರು 20 ಕಿ.ಮೀ ಕಾಡಿನಲ್ಲಿ ಸಫಾರಿ ನಡೆಸಿದರು.
ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬಂಡೀಪುರಕ್ಕೆ ಭೇಟಿ ನೀಡಿದರು. ಮೇಲುಕಾಮನಹಳ್ಳಿ ಹೆಲಿಪ್ಯಾಡ್ ಗೆ ಬಂದಿಳಿದ ಪ್ರಧಾನಿ ಮೋದಿ ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಬಂಡಿಪುರ ಕ್ಯಾಂಪ್ ಬಂದರು. ಸಾಕಷ್ಟು ಉತ್ಸಾಹದಿಂದ ಬಂಡೀಪುರಕ್ಕೆ ಬಂದಿದ್ದ ಮೋದಿಯವರು ಖಾಕಿ ಬಣ್ಣದ ಪ್ಯಾಂಟ್, ಟೀ ಶರ್ಟ್, ಕಪ್ಪು ಬಣ್ಣದ ಹ್ಯಾಟ್, ಕನ್ನಡಕ, ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಬಂದಿದ್ದರು. ಬಂಡೀಪುರದ ಕಾಡಿನಲ್ಲಿ ಸುತ್ತಾಡಿ ಅಲ್ಲಿನ ವನ್ಯಪ್ರಾಣಿ, ಪರಿಸರವನ್ನು ಕಂಡು ಪುಳಕಿತರಾದರು.
ಈ ಸಂದರ್ಭದಲ್ಲಿ ಮೋದಿ ಅವರ ಸ್ಟೈಲಿಶ್ ಫೊಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಬಂಡೀಪುರಕ್ಕೆ ಬರುವ ಮುನ್ನ ಕೈಯಲ್ಲಿ ಜಾಕೆಟ್ ಹಿಡಿದು ಬರುವುದು ಹಾಗೂ ಬೋಳಗುಡ್ಡದಲ್ಲಿ ಬೈನಾಕುಲರ್ ನಲ್ಲಿ ಕಾಡಿನ ವೀಕ್ಷಣೆ, ಹುಲಿ ಚಿತ್ರದ ಜೊತೆ ಫೋಟೋಗೆ ಪೋಸ್ನ ಸ್ಟೈಲಿಶ್ ಚಿತ್ರಗಳು ಸಾಕಷ್ಟು ವೈರಲ್ ಆಗಿವೆ.
ಬಂಡೀಪುರದ ಹುಲಿ ಸಂರಕ್ಷಿತ ತಾಣದಲ್ಲಿ ಅರಣ್ಯ ಇಲಾಖೆಯ ಚಾಲಕ ಮಧುಸೂದನ್ ಜೀಪ್ನಲ್ಲಿ ಮೋದಿಯವರನ್ನು ಕೂಡಿಸಿಕೊಂಡು ಕಾಡು ಸುತ್ತಾಡಿಸಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಒಂದೂವರೆ ತಾಸು ಸಫಾರಿ ನಡೆಸಿದ್ದು ಸುಮಾರು 20 ಕಿ.ಮೀ ಕಾಡಿನಲ್ಲಿ ಓಡಾಡಿದ್ದಾರೆ.
ತೆರೆದ ಜೀಪ್ನಲ್ಲಿ ಸಫಾರಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ದುರ್ಬಿನು ಹಿಡಿದು ಪ್ರಾಣಿಗಳನ್ನು ವೀಕ್ಷಿಸಿದರು. ಕೆಲವು ಕಡೆಗಳಲ್ಲಿ ಕ್ಯಾಮೆರಾ ಹಿಡಿದು ಕೆಲ ಪ್ರಾಣಿಗಳ ಫೋಟೋ ಕ್ಲಿಕ್ಕಿಸಿದ್ದಾರೆ. ಅವರಿಗೆ ಸಫಾರಿ ಸಂದರ್ಭದಲ್ಲಿ ಜಿಂಕೆ, ಕಡವೆ, ಕಾಡೆಮ್ಮೆ, ಉಡಗಳನ್ನು ನೋಡಿದ್ದಾರೆ. ಇನ್ನು ಸಫಾರಿ ವೇಳೆ ಎದುರಿಗೆ ಬಂದ ಆನೆಗೆ ಕಬ್ಬು ನೀಡಿದ್ದಾರೆ. ಆದರೆ ಒಂದೂವರೆ ತಾಸು ಕಾಡು ಸುತ್ತಿದ್ದರೂ ನರೇಂದ್ರ ಮೋದಿಯವರಿಗೆ ಸಫಾರಿಯಲ್ಲಿ ಹುಲಿ ಕಾಣಿಸಲಿಲ್ಲ ಎನ್ನಲಾಗಿದೆ.
ದೇಶದಲ್ಲಿದೆ 3,167 ಹುಲಿಗಳು :
ಭಾರತದಲ್ಲಿ ಹುಲಿಗಳ ಸಂಖ್ಯೆ ಹಿಂದಿನ 2,967 ರಿಂದ 3,167 ಕ್ಕೆ ಏರಿದೆ ಎಂದು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಅಖಿಲ ಭಾರತ ಹುಲಿ ಅಂದಾಜಿನ ಸಾರಾಂಶ ವರದಿಯನ್ನು ಬಿಡುಗಡೆ ಮಾಡಿದರು.
ಮೋದಿ ಅವರು ಇಂಟರ್ ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಕ್ಕೆ ಚಾಲನೆ ನೀಡಿದರು. ಮತ್ತು ಹುಲಿ ಸಂರಕ್ಷಣೆಗಾಗಿ ಅಮೃತ್ ಕಾಲ್ ಕಾ ವಿಷನ್ ಅನ್ನು ಬಿಡುಗಡೆ ಮಾಡಿದರು ಮತ್ತು ಪ್ರಾಜೆಕ್ಟ್ ಟೈಗರ್ನ 50 ವರ್ಷಗಳನ್ನು ಪೂರ್ಣಗೊಳಿಸಿದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು. ಭಾರತವು ಹುಲಿಗಳನ್ನು ಮಾತ್ರ ಉಳಿಸಿಲ್ಲ, ಜೊತೆಗೆ ಅವು ಅಭಿವೃದ್ಧಿ ಹೊಂದಲು ಸೂಕ್ತ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ. ‘ಪ್ರಾಜೆಕ್ಟ್ ಟೈಗರ್’ ಯಶಸ್ಸು ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಮೋದಿ ಹೇಳಿದರು.
ಬಂಡೀಪುರದ ಬಳಿಕ ಮಧುಮಲೈ ಹುಲಿ ಸಂರಕ್ಷಣಾ ಸ್ಥಳಕ್ಕೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ “ದಿ ಎಲಿಫೆಂಟ್ ವಿಸ್ಪರರ್ಸ್” ನ ಬೊಮ್ಮನ್ ಮತ್ತು ಬೆಳ್ಳಿಯವರನ್ನು ಇದೇ ಮೊದಲ ಬಾರಿಗೆ ಪ್ರಧಾನಿಯವರು ಭೇಟಿ ಮಾಡಿದರು. ಅವರು ಸಾಕಿದ ಆನೆಗಳ ಜೊತೆ ನಿಂತು ಫೊಟೊ ತೆಗೆಸಿಕೊಂಡರು.