ಬೆಂಗಳೂರು, ಏ.6 www.bengaluruwire.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆ.27ರಂದು ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ಅದೇ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 1600 ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಜನರನ್ನು ಕರೆತರಲಾಗಿತ್ತು.
ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಬರುತ್ತಿರುವ ಹಿನ್ನಲೆಯಲ್ಲಿ ಅಂದು ಭರಪೂರ ಜನ ತುಂಬಿದ್ದರು. ಆದರೆ ಆ ಜನರನ್ನು ಶಿವಮೊಗ್ಗದ ಮೂಲೆ ಮೂಲೆಗಳಿಂದ ಬಿಜೆಪಿ ಸರ್ಕಾರ ಕರೆತದಂದಿರುವ ವಿಷಯ ಮಾಹಿತಿ ಹಕ್ಕು ಅರ್ಜಿಗೆ ಕೆಎಸ್ ಆರ್ ಟಿಸಿ ಶಿವಮೊಗ್ಗದ ವಿಭಾಗದ ಅಧಿಕಾರಿಗಳು ಉತ್ತರದಲ್ಲಿ ಈ ವಿಷಯ ಬಹಿರಂಗವಾಗಿದೆ.
ವಿಮಾನ ನಿಲ್ದಾಣದ ಉದ್ಘಾಟನೆಗೆ ಜನರನ್ನು ಕರೆತರಲು 1,600 ಕೆಎಸ್ ಆರ್ ಟಿಸಿ ವಾಹನಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆದಿದ್ದಕ್ಕೆ ಪ್ರತಿಯಾಗಿ ಶಿವಮೊಗ್ಗ ಕಾರ್ಯಪಾಲಕ ಎಂಜಿನಿಯರ್ ಅವರು 3.93 ಕೋಟಿ ರೂ. (3,93,92,565 ರೂ.) ಹಣ ಪಾವತಿಸಿದ್ದಾರೆ. ಆಕಾಶ್ ಪಾಟೀಲ್ ಎಂಬುವರು ಸಲ್ಲಿಸಿದ್ದ ಆರ್ ಟಿಐ ಅರ್ಜಿಗೆ ಕೆಎಸ್ ಆರ್ ಟಿಸಿ ಈ ಉತ್ತರ ನೀಡಿತ್ತು.
ಆರ್ಜಿದಾರರು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ವಿವಿಧ ಜಿಲ್ಲೆಗಳ ಜನರನ್ನು ಕರೆತರಲು ಎಷ್ಟು ಕೆಎಸ್ ಆರ್ ಟಿಸಿ ಬಸ್ ಬಳಸಲಾಗಿತ್ತು? ಅದಕ್ಕೆ ಎಷ್ಟು ವೆಚ್ಚ ಮಾಡಲಾಗಿತ್ತು? ಎಂದು ಅರ್ಜಿಯಲ್ಲಿ ಮಾಹಿತಿ ಕೇಳಿದ್ದರೆ, ಅಧಿಕಾರಿಗಳು ಕೇವಲ ಶಿವಮೊಗ್ಗ ಜಿಲ್ಲೆಯಿಂದ ಬಳಕೆಯಾದ ಬಸ್ ಹಾಗೂ ಅದಕ್ಕೆ ಪಾವತಿಸಿದ ಹಣದ ಮಾಹಿತಿಯಷ್ಟೆ ನೀಡಿದ್ದಾರೆ.
ಸೋಗಾನೆಯಲ್ಲಿ ರೂ. 450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಸೇರಿದಂತೆ 3,600 ಕೋಟಿ ರೂ.ಗಿಂತ ಹೆಚ್ಚಿನ ಬಹು ವಿಧದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಚಿವರಾದ ನಾರಾಯಣಗೌಡ, ವಿ.ಸೋಮಣ್ಣ, ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಚಿವ ಈಶ್ವರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶೇಷ ಪೇಟ ತೊಡಿಸಿ ಶಿವಮೊಗ್ಗ ಏರ್ಪೋರ್ಟ್ ಕಲಾಕೃತಿಯನ್ನು ಕಾಣಿಕೆ ನೀಡಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.