ನವದೆಹಲಿ : ದೇಶದ್ಯಂತ ಕರೋನಾ ಎರಡನೇ ಅಲೆಯಿಂದ ಕೋವಿಡ್ ಸೋಂಕಿತರ ಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕದ ಕೊರತೆ ತೀವ್ರವಾಗಿದೆ. ಈ ಹೊತ್ತಿನಲ್ಲಿ ರೈಲ್ವೆ ಇಲಾಖೆ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲಿನ ಮೂಲಕ, ಆಕ್ಸಿಜನ್ ಕಂಟೈನರ್ ಹೊತ್ತ ಟ್ರಕ್ ಗಳನ್ನು ಗ್ರೀನ್ ಕಾರಿಡಾರ್ ನಲ್ಲಿ ಸಾಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ.
ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಆಕ್ಸಿಜನ್ ಎಕ್ಸ್ ರೈಲಿನಲ್ಲಿ ಏ.19 ರಂದು ಮಹಾರಾಷ್ಟ್ರದ ಕಾಳಂಬೋಲಿಯಿಂದ 1,850 ಕಿ.ಮೀ ದೂರದ ವೈಜಾಕ್ ಗೆ 7 ಖಾಲಿ ಆಕ್ಸಿಜನ್ ಟ್ಯಾಂಕರ್ ಹೊತ್ತ ಟ್ರಕ್ ಗಳನ್ನು ಸಮತಟ್ಟಾದ ವ್ಯಾಗನ್ ನ್ ಮೂಲಕ 50 ಗಂಟೆಗಳಲ್ಲಿ ಸಾಗಿಸುವಲ್ಲಿ ಯಶಸ್ವಿಯಾಗಿದೆ.
ಅಲ್ಲದೆ 7 ಟ್ಯಾಂಕರ್ ಗಳಿಗೆ ವೈಜಾಕ್ ನಲ್ಲಿ 100 ಟನ್ ಗೂ ಹೆಚ್ಚು ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್ ಎಮ್ ಒ) ವನ್ನು 10 ಗಂಟೆಗಳಲ್ಲಿ ತುಂಬಿಸಲಾಯಿತು. ಹೀಗೆ ತುಂಬಿದ ಆಕ್ಸಿಜನ್ ಅನ್ನು ಹೊತ್ತ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ನಾಗಪುರವನ್ನು 21 ಗಂಟೆಗಳಲ್ಲಿ ತಲುಪಿತು.
ಆಕ್ಸಿಜನ್ ತುಂಬಿದ 3 ಟ್ಯಾಂಕರ್ ಗಳನ್ನು ಶುಕ್ರವಾರವಾರ ನಾಗಪುರದಲ್ಲಿ ಇಳಿಸಲಾಯಿತು. ಉಳಿದ 4 ಟ್ಯಾಂಕರ್ ಗಳನ್ನು ಹೊತ್ತ ವಿಶೇಷ ರೈಲು ಶನಿವಾರ (ಏ.24) ಬೆಳಗ್ಗೆ 10.25 ರ ಸಂದರ್ಭದಲ್ಲಿ (12 ಗಂಟೆಗಳಲ್ಲಿ) ನಾಗಪುರದಿಂದ ನಾಸಿಕ್ ಗೆ ತಲುಪಿದೆ.

ಆ ಮೂಲಕ ಕೋವಿಡ್ ಸಂಕಷ್ಠದ ಸಂದರ್ಭದಲ್ಲಿ ಯಶಸ್ವಿಯಾಗಿ ರೈಲ್ವೆ ಇಲಾಖೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕವನ್ನು ತಡೆರಹಿತವಾಗಿ ಪೂರೈಸುವಲ್ಲಿ ಯಶಸ್ವಿಯಾಗಿದೆ.
ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ತಿಳಿಸಿದ್ದಾರೆ.
ಆಕ್ಸಿಜನ್ ಎಕ್ಸ್ ಪ್ರೆಸ್ ನಲ್ಲಿ ಎದುರಾದ ಸವಾಲುಗಳೇನು? ರೈಲ್ವೆ ಇಲಾಖೆ ಇದನ್ನು ಹೇಗೆ ಬಳಸಿಕೊಂಡು ತುರ್ತಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಡೆರಹಿತವಾಗಿ ಮೆಡಿಕಲ್ ಆಕ್ಸಿಜನ್ ಪೂರೈಸಿತು?
ದೇಶದ ವಿವಿದ ಭಾಗಗಳಿಗೆ ತ್ವರಿತವಾಗಿ ವೈದ್ಯಕೀಯ ಆಮ್ಲಜನಕ ತಲುಪಿಸುವ ಉದ್ದೇಶದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬಳಸುವ ಮೊದಲು ತಾಂತ್ರಿಕ ಪರೀಕ್ಷೆಗಳನ್ನು ರೈಲ್ವೆ ಇಲಾಖೆ ಈಗಾಗಲೇ ಕೈಗೊಂಡಿದೆ. ಮೊದಲಿಗೆ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಂದ ರೈಲಿನಲ್ಲಿ ಟ್ಯಾಂಕರ್ ಹೊಂದಿದ ಟ್ರಕ್ ಗಳನ್ನು ದ್ರವೀಕೃತ ವೈದ್ಯಕೀಯ ಆಕ್ಸಿಜನ್ ಹಾಗೂ ಆಕ್ಸಿಜನ್ ಸಿಲಿಂಡರ್ ಪೂರೈಕೆಗೆ ಬಳಸಲು ಮನವಿ ಮಾಡಿತ್ತು.
ಅದರಂತೆ ಮೊದಲಿಗೆ ಮುಂಬೈನ ಕಲಂಬೋಲಿ ರೈಲ್ವೆ ನಿಲ್ದಾಣದಿಂದ 7 ನಿರ್ದಿಷ್ಟ ಗಾತ್ರದ ಆಕ್ಸಿಜನ್ ಟ್ಯಾಂಕರ್ ಟ್ರಕ್ ಗಳನ್ನು ವಾಸಯ್, ಸೂರತ್, ಬೂಸ್ವಾಲ್ ಹಾಗೂ ನಾಗಪುರ ರೈಲ್ವೆ ಮಾರ್ಗದ ಮೂಲಕ ಆಂಧ್ರಪ್ರದೇಶದ ವೈಜಾಕ್ ತಲಪುವ ನಿಟ್ಟಿನಲ್ಲಿ ಸಾಗಿಸಲು ಯೋಜನೆ ರೂಪಿಸಿತ್ತು.
ಆಮ್ಲಜಕ ಹೇಳಿಕೇಳಿ ಕ್ರಯೋಜಿನಕ್ ಹಾಗೂ ಅಪಾಯಕಾರಿ ರಾಸಾಯನಿಕ ವಸ್ತು. ಅದನ್ನು ಬಹಳ ನಾಜೂಕಿಂದ ಹೊತ್ತೊಯ್ಯಬೇಕು. ಆಕ್ಸಿಜನ್ ಲೋಡ್ ಆಗಿದ್ದಾಗ ಆಗಾಗ ಆ ಟ್ಯಾಂಕರ್ ಒತ್ತಡವನ್ನು ಪರೀಕ್ಷಿಸಬೇಕು. ನಿರ್ದಿಷ್ಟ ಮಾರ್ಗದಲ್ಲಿ ಅತ್ಯಂತ ವೇಗವಾಗಿ, ನಿಧಾನವಾಗಿ ರೈಲು ಚಲಿಸುವಂತಿಲ್ಲ. ಈ ಎಲ್ಲ ಸವಾಲುಗಳನ್ನು ಸ್ವೀಕರಿಸಿದ ರೈಲ್ವೆ ಇಲಾಖೆ ಆ ಮಾರ್ಗದಲ್ಲಿ ಸಾಗಲು ಯೋಜನೆ ರೂಪಿಸಿ ತನ್ನ ಸಿಬ್ಬಂದಿಗೆ ತರಬೇತಿ ನೀಡಿತು.
ನಿರ್ದಿಷ್ಟ ರೈಲ್ವೆ ಮಾರ್ಗದಲ್ಲಿ ಎಲ್ಲೆಲ್ಲಿ ಘಾಟ್ ಸೆಕ್ಷನ್, ರಸ್ತೆ ಮೇಲ್ಸೇತುವೆ, ಸುರಂಗ ಮಾರ್ಗ, ತಿರುವು, ಮೇಲ್ಬಾಗದ ಉಪಕರಣಗಳ ಅಳವಡಿಕೆ ಹಾಕಲಾಗಿದೆ ಎಂಬಿತ್ಯಾದಿ ವಿಷಯಗಳನ್ನು ಲೆಕ್ಕ ಹಾಕಿ ಯೋಜನೆ ರೂಪಿಸಿತು.
ಅದೇ ರೀತಿ ನಿರ್ದಿಷ್ಟ ರೈಲ್ವೆ ನಿಲ್ದಾಣಗಳಲ್ಲಿ ಆಕ್ಸಿಜನ್ ಟ್ಯಾಂಕರ್ ಟ್ರಕ್ ಇಳಿಸಲು ತುರ್ತಾಗಿ ಇಳಿಜಾರು ರಾಂಪ್ ನಿರ್ಮಿಸಿತ್ತು.
ಬಹುದ್ದೇಶಿತ ಸಾಗಣೆಯ ರೋಲ್ ಆನ್ ರೋಲ್ ಆಫ್ ಸೇವೆ ಒದಗಿಸುವ ರೈಲಿನ ಸಮತಟ್ಟಾದ ವ್ಯಾಗನ್ ಮೇಲೆ ಇಂತಹ ಸ್ಥಳಗಳಲ್ಲಿ ಕೊಂಡೊಯ್ಯಲು ಅನುವಾಗುವಂತೆ, ಟಿ 1618 ಮಾಡೆಲ್ ನ 10.89 ಎತ್ತರದ ಆಕ್ಸಿಜನ್ ಟ್ಯಾಂಕರ್ ಹೊತ್ತ 7 ಖಾಲಿ ಟ್ರಕ್ ಗಳನ್ನು ಬಳಕೆ ಮಾಡಿತ್ತು.
ಅದರಂತೆ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು 50 ಗಂಟೆಯಲ್ಲಿ ಕಾಲಂಬೋಲಿಯಿಂದ 1,850 ಕಿ.ಮೀ ದೂರವನ್ನು 50 ಗಂಟೆಗಳಲ್ಲಿ ಕ್ರಮಿಸಿ ವೈಜಾಕ್ ತಲುಪಿತು. ಆನಂತರ ಆಮ್ಲಜಕ ಹೊತ್ತು 21 ಗಂಟೆಯಲ್ಲಿ ಯಶಸ್ವಿಯಾಗಿ ನಾಗಪುರ ತಲುಪಿತು. ಆನಂತರ 12 ಗಂಟೆಯಲ್ಲಿ ಶನಿವಾರ ಬೆಳಗ್ಗೆ ನಾಸಿಕ್ ಗೆ ಆಕ್ಸಿಜನ್ ಟ್ಯಾಂಕರನ್ನು ಹೊತ್ತು ತಂದಿದೆ.
“ಭಾರತೀಯ ರೈಲ್ವೆ ಇಲಾಖೆಯ ಆಕ್ಸಿಜನ್ ಎಕ್ಸ್ ಪ್ರೆಸ್ ಸೇವೆ ನಿಜಕ್ಕೂ ಕೋವಿಡ್ ಸಂಕಷ್ಠ ಕಾಲದಲ್ಲಿ ಲಕ್ಷಾಂತರ ಜನರ ಪ್ರಾಣ ಉಳಿಸುವಲ್ಲಿ ಸಹಕಾರಿಯಾಗಿದೆ. ವೇಗವಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಸುವುದರಿಂದ ಆಯಾ ರಾಜ್ಯ ಸರ್ಕಾರ ಹಾಗೂ ಆಸ್ಪತ್ರೆಗಳ ಮೇಲೆ ವೈದ್ಯಕೀಯ ಆಮ್ಲಜನಕ ಬೇಡಿಕೆ ಒತ್ತಡವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬಹುದಾಗಿದೆ.”
ಸಂಜೀವ್ ದ್ಯಾವಣ್ಣನವರ್, ರೈಲ್ವೆ ತಙ್ಞರು
ಏನಿದು ಗ್ರೀನ್ ಕಾರಿಡಾರ್ ವ್ಯವಸ್ಥೆ? ಯಾರು ಯಾರಿಗೆ ಈ ಸೌಲಭ್ಯ ಒದಗಿಸಲಾಗುತ್ತೆ?
ಸಾಮಾನ್ಯವಾಗಿ ರೈಲ್ವೆ ಇಲಾಖೆ ಪ್ರಧಾನ ಮಂತ್ರಿ, ರಾಷ್ಟ್ರಪತಿಗಳು ಪ್ರಯಾಣಿಸುವ ಸಂದರ್ಭದಲ್ಲಿ ರೈಲು ತಡೆರಹಿತವಾಗಿ ಚಲಿಸಲು ಅನುವಾಗುವಂತೆ ಮಾತ್ರ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿರುತ್ತಾರೆ. ಉಳಿದಂತೆ ಭಾರತೀಯ ಸೇನೆ ಯುದ್ಧದ ಸಂದರ್ಭದಲ್ಲಿ ಅಥವಾ ಇನ್ನಿತರ ಗಂಭೀರ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತ ಕಂಟೇನರ್ ಗಳನ್ನು ಸಾಗಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಈ ವ್ಯವಸ್ಥೆಯಲ್ಲಿ ಡೀಸೆಲ್ ಮತ್ತು ಎಲೆಕ್ಟ್ರಿಕ್ ರೈಲ್ವೆ ಎಂಜಿನ್ ನಂತಹ ಡಬಲ್ ಎಂಜಿನ್ ಗಳನ್ನು ಬೋಗಿಗಳೊಂದಿಗೆ ಜೋಡಿಸಿರಲಾಗುತ್ತದೆ. ಎಲೆಕ್ಟ್ರಿಕ್ ರೈಲು ಎಂಜಿನ್ ಕೈಕೊಟ್ಟರೂ, ಡೀಸೆಲ್ ಎಂಜಿನ್ ಮೂಲಕ ರೈಲು ಸಮರ್ಪಕವಾಗಿ ಚಲಿಸುವಂತೆ ಆಯೋಜಿಸಲಾಗಿರುತ್ತದೆ.
ಇದೀಗ ರೈಲ್ವೆ ಇಲಾಖೆ ಕರೋನಾದಂತಹ ಸಂದರ್ಭದಲ್ಲಿ ಸಾಮಾನ್ಯ ಜನರ ಪ್ರಾಣ ಕಾಪಾಡಲು, ತ್ವರಿತವಾಗಿ ಮೆಡಿಕಲ್ ಆಕ್ಸಿಜನ್ ಸಾಗಾಟಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಕಲ್ಪಿಸಿದೆ.
ದೂರದ ಸರಕು ಸಾಗಾಟಕ್ಕೆ ರೈಲ್ವೆ ಮಾರ್ಗ, ರಸ್ತೆ ಮಾರ್ಗಕ್ಕೆ ಹೋಲಿಸಿದರೆ ಅತ್ಯಂತ ಪ್ರಶಸ್ತವಾದುದು. ರಸ್ತೆ ಮಾರ್ಗದಲ್ಲಿ ಸಾಗಲು ಮೂರು ದಿನ ಬೇಕಾದರೆ, ರೈಲು ಮಾರ್ಗದಲ್ಲಿ ಎರಡು ದಿನದಲ್ಲಿ ತಲುಪಬಹುದು. ಟ್ರಕ್ ಡ್ರೈವರ್ ಅಲ್ಲಲ್ಲಿ ವಿಶ್ರಾಂತಿಗಾಗಿ ಗಾಡಿ ನಿಲ್ಲಿಸುವುದರಿಂದ ಸಮಯ ವಿಳಂಬವಾಗಲಿದೆ. ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಆ ಸಮಸ್ಯೆಯಿಲ್ಲ.
























