ಬೆಂಗಳೂರು, ಮಾ.20 www.bengaluruwire.com: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿಚಾರಣಾ ನ್ಯಾಯಾಲಯಗಳಲ್ಲಿ ಕಪ್ಪು ಕೋಟ್ ಹಾಗೂ ಹೈಕೋರ್ಟ್ನಲ್ಲಿ ಗೌನ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘವು (AAB) ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದೆ.
ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗುತ್ತಿದ್ದ ಬೇಸಿಗೆಯ ಪ್ರಖರತೆ ಈ ಬಾರಿ ಮಾರ್ಚ್ ಎರಡನೇ ವಾರದಲ್ಲೇ ವಿಪರೀತವಾಗಿದೆ. ಹೀಗಾಗಿ ವಕೀಲರ ಹಿತದೃಷ್ಟಿಯಿಂದ ಕೂಡಲೇ ಡ್ರೆಸ್ ಕೋಡ್ನಲ್ಲಿ ಸಡಿಲಿಕೆ ಮಾಡಬೇಕು ಎಂದು ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದ ಪದಾಧಿಕಾರಿಗಳು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಪ್ರಮುಖ ಮನವಿಗಳು:
ವಿನಾಯಿತಿ ಅವಧಿ: ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಮಾರ್ಚ್ 18ರಿಂದ ಅಥವಾ ಯುಗಾದಿ ಹಬ್ಬದ ನಂತರ (ಮಾರ್ಚ್ 23) ಜೂನ್ 15 ರವರೆಗೆ ವಿನಾಯಿತಿ ನೀಡಬೇಕು.

ಸ್ಥಳ: ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳು (Trial Courts) ಮತ್ತು ಹೈಕೋರ್ಟ್ನ ಬೆಂಗಳೂರು, ಧಾರವಾಡ ಹಾಗೂ ಕಲ್ಬುರ್ಗಿ ಪೀಠಗಳಲ್ಲಿ ಈ ವಿನಾಯಿತಿ ಅನ್ವಯವಾಗಬೇಕು.
ಗೌನ್ ಮುಕ್ತಿ: ಹೈಕೋರ್ಟ್ ಪೀಠಗಳಲ್ಲಿ ಗೌನ್ ಧರಿಸುವುದು ಅಸಹನೀಯವಾಗಿದ್ದು, ಈ ಬಗ್ಗೆ ರಿಜಿಸ್ಟ್ರಿಗೆ ಅಗತ್ಯ ನಿರ್ದೇಶನ ನೀಡುವಂತೆ ಕೋರಲಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಹೈಕೋರ್ಟ್ ಈ ವಿನಾಯಿತಿಯನ್ನು ನೀಡುತ್ತಾ ಬಂದಿದ್ದು, ಈ ವರ್ಷವೂ ಕೂಡಲೇ ಆದೇಶ ಹೊರಡಿಸುವಂತೆ ವಕೀಲರ ಸಮುದಾಯ ನಿರೀಕ್ಷಿಸುತ್ತಿದೆ.




















