ಬೆಂಗಳೂರು, ಮಾ.19 www.bengaluruwire.com: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ (Honor Killing) ಮತ್ತು ಜಾತಿ ಕಾರಣಕ್ಕೆ ವಿವಾಹಕ್ಕೆ ಅಡ್ಡಿಪಡಿಸುವ ಕೃತ್ಯಗಳನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ವಿಧಾನಸಭೆಯಲ್ಲಿ ಮಹತ್ವದ ‘ಇವ ನಮ್ಮವ ಇವ ನಮ್ಮವ ಮಸೂದೆ-2026’ ಅನ್ನು ಮಂಡಿಸಿದರು.
ಅಂತರ್ಜಾತಿ ವಿವಾಹವಾಗುವ ಜೋಡಿಗಳ ರಕ್ಷಣೆ, ಆಯ್ಕೆಯ ಸ್ವಾತಂತ್ರ್ಯ ಮತ್ತು ಜಾತಿ ದ್ವೇಷದ ಅಪರಾಧಗಳ ತಡೆ ಈ ಮಸೂದೆಯ ಪ್ರಮುಖ ಗುರಿಯಾಗಿದೆ. ಮರ್ಯಾದೆಯ ಹೆಸರಿನಲ್ಲಿ ನಡೆಯುವ ಕಿರುಕುಳ, ಸಾಮಾಜಿಕ ಬಹಿಷ್ಕಾರ ಹಾಗೂ ಹಲ್ಲೆಗಳನ್ನು ಈ ಕಾನೂನು ಗಂಭೀರವಾಗಿ ಪರಿಗಣಿಸಲಿದೆ.
ಕಠಿಣ ಶಿಕ್ಷೆಯ ನಿಬಂಧನೆಗಳು ಹೀಗಿವೆ:
ಜೈಲು ಶಿಕ್ಷೆ: ಮರ್ಯಾದೆ ಹೆಸರಿನಲ್ಲಿ ಹತ್ಯೆ ಅಥವಾ ಸಾವಿಗೆ ಕಾರಣರಾದವರಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಗಾಯ ಮತ್ತು ದಂಡ: ದಂಪತಿಗಳ ಮೇಲೆ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದರೆ 3 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಲಾಗುತ್ತದೆ.
ಕಾನೂನುಬಾಹಿರ ಸಭೆ: ಮದುವೆ ತಡೆಯಲು ಪಂಚಾಯತ್ ಅಥವಾ ಸಭೆ ನಡೆಸುವವರಿಗೆ 5 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಬಹುದು.
ಜಾಮೀನು ರಹಿತ: ಸಾಕ್ಷ್ಯ ನಾಶಪಡಿಸುವುದು ಮತ್ತು ಪಿತೂರಿ ನಡೆಸುವ ಪ್ರಕರಣಗಳನ್ನೂ ಒಳಗೊಂಡಂತೆ ಈ ಎಲ್ಲ ಅಪರಾಧಗಳು ಜಾಮೀನು ರಹಿತವಾಗಿರಲಿವೆ.
ಮದುವೆ ನಿರಾಕರಣೆ ಇನ್ನು ಮುಂದೆ ‘ಅತ್ಯಾಚಾರ’:
ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿ, ನಂತರ ಜಾತಿ ಅಥವಾ ಮನೆಯವರ ಒತ್ತಡದ ನೆಪ ಹೇಳಿ ವಿವಾಹ ನಿರಾಕರಿಸಿದರೆ ಅದನ್ನು ‘ಅತ್ಯಾಚಾರ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 5 ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ದಂಡನೆ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪೊಲೀಸ್ ರಕ್ಷಣೆ ಮತ್ತು ವಿಶೇಷ ನ್ಯಾಯಾಲಯ:
ಅಂತರ್ಜಾತಿ ವಿವಾಹವಾದವರಿಗೆ ರಕ್ಷಣೆ ನೀಡುವುದು ಪೊಲೀಸರ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ಸುರಕ್ಷಿತ ವ್ಯವಸ್ಥೆ (Safe Houses) ಮಾಡಬೇಕಿದೆ. ಇಂತಹ ಪ್ರಕರಣಗಳ ಶೀಘ್ರ ವಿಲೇವಾರಿಗೆ ‘ವಿಶೇಷ ನ್ಯಾಯಾಲಯ’ ಸ್ಥಾಪನೆ ಮತ್ತು ಸಹಾಯವಾಣಿ ಆರಂಭಿಸುವ ಬಗ್ಗೆಯೂ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
‘ಇವ ನಮ್ಮವ ಇವ ನಮ್ಮವ’ ವೇದಿಕೆಯ ಮೂಲಕ ಅಂತರ್ಜಾತಿ ವಿವಾಹಗಳಿಗೆ ಸಾಮಾಜಿಕ ಗೌರವ ಮತ್ತು ಮಾನವ ಹಕ್ಕುಗಳ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮಸೂದೆ ತಿಳಿಸಿದೆ.



















