ಬೆಂಗಳೂರು, ಮಾ.18 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಟ್ಟಡ ಮಾಲೀಕರಿಂದ ಕೋಟಿಗಟ್ಟಲೆ ಘನತ್ಯಾಜ್ಯ ಕರ ಸಂಗ್ರಹಿಸುತ್ತಿದ್ದರೂ, ಬೆಂಗಳೂರಿನ ಬೀದಿಗಳು ಕಸಮುಕ್ತವಾಗಿಲ್ಲ. ಬದಲಿಗೆ ಮಿಶ್ರ ಕಸದಿಂದ ತುಂಬಿದ ರಸ್ತೆಗಳು ನಾಗರಿಕರನ್ನು ಸ್ವಾಗತಿಸುತ್ತಿವೆ.
ಈ ಮಧ್ಯೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಅಧಿಕಾರಿಗಳು ಆಟೊ ಟಿಪ್ಪರ್ ಚಾಲಕರು ಮತ್ತು ಸಹಾಯಕರನ್ನು ಅವರ ನಿಗದಿತ ಕೆಲಸದ ಜೊತೆಗೆ ರಸ್ತೆಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸುವ ಕೆಲಸಕ್ಕೂ ಒತ್ತಾಯಿಸಿ, ತೀವ್ರ ಶೋಷಣೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ದೌರ್ಜನ್ಯವನ್ನು ಖಂಡಿಸಿ, ಕಸ ವಿಂಗಡಣೆ ಕೆಲಸವನ್ನು ನಿರಾಕರಿಸಿರುವ ಕಾರ್ಮಿಕರು ಮಾರ್ಚ್ 23 ರಿಂದ ಅನಿರ್ದಿಷ್ಟಾವಧಿ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಸೋಮವಾರದಿಂದ ನಗರದಾದ್ಯಂತ ತ್ಯಾಜ್ಯ ಸಂಗ್ರಹ ಮತ್ತು ಸಾಗಣೆಯಲ್ಲಿ ಭಾರಿ ವ್ಯತ್ಯಯವಾಗುವ ಆತಂಕ ಎದುರಾಗಿದೆ.
ಕಸಮುಕ್ತ ಬೆಂಗಳೂರು ಕನಸು ನನಸಾಗುವುದೆಂದು?:

ಪ್ರತಿ ವರ್ಷ ಬೆಂಗಳೂರಿನ ತೆರಿಗೆದಾರರಿಂದ ನೂರಾರು ಕೋಟಿ ರೂಪಾಯಿಗಳಷ್ಟು ಘನತ್ಯಾಜ್ಯ ಕರ (Solid Waste Cess) ಸಂಗ್ರಹವಾಗುತ್ತಿದೆ. ಆದರೆ, ಈ ಬೃಹತ್ ಮೊತ್ತವನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಗುತ್ತಿಗೆದಾರರು ಸರಿಯಾದ ಸಮಯಕ್ಕೆ ಬಿಲ್ ಪಾವತಿಯಾಗುತ್ತಿಲ್ಲ ಎಂದು ದೂರುತ್ತಿದ್ದರೆ, ಅತ್ತ ಕಾರ್ಮಿಕರ ವೇತನವೂ ಅನಿಶ್ಚಿತವಾಗಿದೆ. ಈ ಆರ್ಥಿಕ ಅಸ್ಥಿರತೆಯ ನೇರ ಪರಿಣಾಮ ಬೆಂಗಳೂರಿನ ಸ್ವಚ್ಛತೆಯ ಮೇಲೆ ಬೀರುತ್ತಿದೆ.
ನಗರದ ಯಾವುದೇ ಮುಖ್ಯ ರಸ್ತೆ ಅಥವಾ ಒಳರಸ್ತೆಗಳಿಗೆ ಹೋದರೂ, ಮಿಶ್ರ ಕಸದ ರಾಶಿಗಳು, ಪ್ಲಾಸ್ಟಿಕ್ ತಾಜ್ಯ, ಇ-ತ್ಯಾಜ್ಯಗಳು ಬೇಕಾಬಿಟ್ಟಿ ಬಿದ್ದಿರುವುದು ಸಾಮಾನ್ಯ ದೃಶ್ಯವಾಗಿದೆ. ‘ಕಸಮುಕ್ತ ಬೆಂಗಳೂರು’ ಎಂಬುದು ಕೇವಲ ಘೋಷಣೆಯಾಗಿಯೇ ಉಳಿದಿದೆ, ವಾಸ್ತವದಲ್ಲಿ ನಗರವು ಕಸದ ತೊಟ್ಟಿಯಾಗುತ್ತಿದೆ.
ಆಟೊ ಚಾಲಕರು ಮತ್ತು ಸಹಾಯಕರ ಕಣ್ಣೀರಿನ ಕಥೆ: ಕಸ ವಿಂಗಡಣೆಗೆ ಬಲವಂತದ ಶೋಷಣೆ:
ಈಗಾಗಲೇ ಕಡಿಮೆ ವೇತನಕ್ಕೆ, ಭಾನುವಾರಗಳೂ ರಜೆಯಿಲ್ಲದೆ ದಿನಕ್ಕೆ 10-12 ಗಂಟೆಗಳ ಕಾಲ ಶ್ರಮಿಸುತ್ತಿರುವ ಆಟೊ ಟಿಪ್ಪರ್ ಚಾಲಕರು ಮತ್ತು ಸಹಾಯಕರ ಮೇಲೆ ಬಿಎಸ್ ಡಬ್ಲುಎಂಎಲ್ (BSWML) ನ ಅಧಿಕಾರಿಗಳು ಹೆಚ್ಚುವರಿ ಹೊರೆಯನ್ನು ಹೇರುತ್ತಿದ್ದಾರೆ.
ತಮ್ಮ ಕೆಲಸವಾದ ಕಸ ಸಂಗ್ರಹ ಮತ್ತು ನಿಗದಿತ ಸ್ಥಳಕ್ಕೆ ತ್ಯಾಜ್ಯ ತಲುಪಿಸುವುದರ ಜೊತೆಗೆ, ಮನೆ-ಮನೆಗಳಿಂದ ಸಂಗ್ರಹಿಸಿದ ಮಿಶ್ರ ಕಸವನ್ನು ರಸ್ತೆಯಲ್ಲೇ ಪ್ರತ್ಯೇಕಿಸಿ, ಹಸಿ ಮತ್ತು ಒಣ ಕಸವಾಗಿ ವಿಂಗಡಿಸುವಂತೆ ಅವರನ್ನು ಒತ್ತಾಯಿಸಲಾಗುತ್ತಿದೆ. ಇದನ್ನು ನಿರಾಕರಿಸಿದರೆ, ಅವರಿಗೆ ವೇತನ ಕಡಿತ, ಆಟೊ ಜಪ್ತಿ ಅಥವಾ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು-ಗುತ್ತಿಗೆದಾರರ ಸಂಘವು BSWML ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಕರೀಗೌಡ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇದು ಸ್ಪಷ್ಟವಾದ ಶೋಷಣೆಯಾಗಿದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
“ಕಸ ವಿಂಗಡಿಸಲ್ಲ, ಕೆಲಸಕ್ಕೂ ಬರಲ್ಲ”: ಮಾರ್ಚ್ 23ರಿಂದ ಅನಿರ್ದಿಷ್ಟಾವಧಿ ಮುಷ್ಕರ:
ಬಿಎಸ್ ಡಬ್ಲ್ಯುಎಂಎಲ್ ಅಧಿಕಾರಿಗಳ ಈ ದಬ್ಬಾಳಿಕೆಗೆ ಬೇಸತ್ತಿರುವ ಕಸ ಸಂಗ್ರಹ ಕಾರ್ಮಿಕರು, ಮಾರ್ಚ್ 23 ರಿಂದ ಬೆಂಗಳೂರಿನಾದ್ಯಂತ ಕೆಲಸಕ್ಕೆ ಗೈರುಹಾಜರಾಗುವುದಾಗಿ ಹೇಳಿದ್ದಾರೆ. “ನಮ್ಮ ಮೂಲ ಕೆಲಸ ಕಸ ಸಂಗ್ರಹ ಮಾಡುವುದು. ಆದರೆ, ಮಿಶ್ರ ಕಸವನ್ನು ವಿಂಗಡಿಸುವ ಜವಾಬ್ದಾರಿ ನಮ್ಮದಲ್ಲ. ಅಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ, ನಮ್ಮ ಶ್ರಮವನ್ನು ಕೇವಲ ಆಟಿಕೆ ಎಂದು ಭಾವಿಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ,” ಎಂದು ಕಾರ್ಮಿಕ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೂ ಬಿಲ್ ಬಾಕಿ: 2025 ರಿಂದಲೇ ಹಣ ಪಾವತಿ ತಡೆ:
ಈ ಸಮಸ್ಯೆಗೆ ಮತ್ತೊಂದು ಮಗ್ಗುಲನ್ನು ಲಾರಿ ಮಾಲೀಕರು ಮತ್ತು ಗುತ್ತಿಗೆದಾರರ ಸಂಘವು ತೆರೆದಿದೆ. ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕಾರ್ಯಾದೇಶವನ್ನು (Work Order) ಉಲ್ಲಂಘಿಸಿರುವ ಅಧಿಕಾರಿಗಳು, ಕಾರ್ಮಿಕರನ್ನು ಶೋಷಿಸುತ್ತಿರುವುದರ ಜೊತೆಗೆ, ಗುತ್ತಿಗೆದಾರರಿಗೆ 2025 ರ ಅಕ್ಟೋಬರ್ ನಿಂದಲೇ ಯಾವುದೇ ಬಿಲ್ ಪಾವತಿ ಮಾಡಿಲ್ಲ ಎಂದು ಸಂಘವು ದೂರಿದೆ.
“ಗುತ್ತಿಗೆದಾರರು ಕೂಡ ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಅವರಿಗೆ ಸರಿಯಾದ ಸಮಯಕ್ಕೆ ಬಿಲ್ ನೀಡದಿದ್ದರೆ ಅವರು ಕಾರ್ಮಿಕರಿಗೆ ವೇತನ ನೀಡುವುದಾದರೂ ಹೇಗೆ?” ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಬಾಲಸುಬ್ರಮಣಿಯಂ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಘನತ್ಯಾಜ್ಯ ವಿಲೇವಾರಿ ನಿಯಮ 2000 ಹಾಗೂ 2016 ರ ಉಲ್ಲಂಘನೆ
ಪತ್ರದಲ್ಲಿ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ನಿಯಮ 2000 ಮತ್ತು 2016 ರ ಉಲ್ಲಂಘನೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾದ ಅಂಶಗಳು ಇಲ್ಲಿವೆ:
ವೈಜ್ಞಾನಿಕ ವಿಂಗಡಣೆಯ ಲೋಪ: ನಿಯಮದ ಪ್ರಕಾರ ಕಸವನ್ನು ಮೂಲದಲ್ಲೇ (ಮನೆಗಳಲ್ಲಿ) ವಿಂಗಡಿಸಬೇಕು. ಆದರೆ, ಅಧಿಕಾರಿಗಳು ಮೂಲದಲ್ಲಿ ವಿಂಗಡಿಸಲು ವಿಫಲರಾಗಿ, ಆ ಜವಾಬ್ದಾರಿಯನ್ನು ಆಟೋ ಚಾಲಕರ ಮೇಲೆ ಹೇರುತ್ತಿದ್ದಾರೆ. ಇದು ನಿಯಮಕ್ಕೆ ವಿರುದ್ಧವಾಗಿದೆ.
ಅಕ್ರಮವಾಗಿ ಕಸ ವಿಂಗಡಣೆ: ರಸ್ತೆ ಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಸುರಿದು ವಿಂಗಡಿಸುವುದು 2016 ರ ನಿಯಮಗಳ ಪ್ರಕಾರ ಅಕ್ರಮ. ಆದರೆ ಅಧಿಕಾರಿಗಳೇ ಒತ್ತಾಯಪೂರ್ವಕವಾಗಿ ರಸ್ತೆ ಬದಿಯಲ್ಲಿ ಕಸ ವಿಂಗಡಿಸುವಂತೆ ಮಾಡುತ್ತಿರುವುದು ನಿಯಮದ ಉಲ್ಲಂಘನೆಯಾಗಿದೆ.
ಅಧಿಕಾರ ದುರ್ಬಳಕೆ: 2000 ಮತ್ತು 2016 ರ ನಿಯಮಗಳನ್ನು ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು, ಗುತ್ತಿಗೆದಾರರು ಮತ್ತು ಚಾಲಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಿಯಮಗಳ ಹೆಸರಿನಲ್ಲಿ ಅನಗತ್ಯವಾಗಿ ದಂಡ ವಿಧಿಸಿ ಕಾರ್ಮಿಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಪತ್ರದಲ್ಲಿ ಸುಬ್ರಮಣಿಯಂ ಅವರು ದೂರಿದ್ದಾರೆ.
ನಗರದಲ್ಲಿ ತ್ಯಾಜ್ಯ ವಿಲೇವಾರಿ ಅಸ್ತವ್ಯಸ್ತ ಭೀತಿ:
ಕಾರ್ಮಿಕರ ಮುಷ್ಕರದಿಂದಾಗಿ ಮಾರ್ಚ್ 23 ರಿಂದ ಬೆಂಗಳೂರಿನಲ್ಲಿ ಕಸ ಸಂಗ್ರಹ ಮತ್ತು ಸಾಗಣೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ನಗರದಾದ್ಯಂತ ಕಸದ ರಾಶಿಗಳು ತುಂಬಿ ತುಳುಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಕೇವಲ ನೈರ್ಮಲ್ಯದ ಸಮಸ್ಯೆಯಲ್ಲ, ಬದಲಿಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣವಾಗಬಹುದು. ಈ ಪರಿಸ್ಥಿತಿಯನ್ನು ಗಮನಿಸಿ, ನಾಗರಿಕರು ತಮ್ಮ ಮನೆಯಲ್ಲೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳುವುದು ಸೂಕ್ತ. ಸರಕಾರ ಮತ್ತು ಬಿಎಸ್ ಡಬ್ಲ್ಯುಎಂಎಲ್ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಿ, ನಗರದ ಸ್ವಚ್ಛತೆ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.



















