ಬೆಂಗಳೂರು, ಮೇ.23 www.bengaluruwire.com : “ರಾಮನಗರ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತು ಕಾಂಗ್ರೆಸ್ ಸರ್ಕಾರ ಬೋರ್ಡ್ ರಾಜಕೀಯದಲ್ಲಿ ತೊಡಗಿದೆ. ಕಳೆದ ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಅವರು ಕೇವಲ ರಾಜಕೀಯ ಹೋರ್ಡಿಂಗ್ಸ್ ಗಳನ್ನೇ ಮೂಲ ಸೌಕರ್ಯ ಅಂದುಕೊಂಡಿದ್ದಾರೆ” ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದು ಅಭಿವೃದ್ಧಿಯಲ್ಲ. ಅದು ಒಂದು ಫಲಕ ಬದಲಾವಣೆ ಮಾತ್ರ. ಐತಿಹಾಸಿಕವಾಗಿ ಆಳವಾದ ಬೇರುಗಳು ಮತ್ತು ಇತಿಹಾಸ ಹೊಂದಿರುವ ಜಿಲ್ಲೆಯನ್ನು ರಿಯಲ್ ಎಸ್ಟೇಟ್ ಯೋಜನೆಯ ಕರಪತ್ರದಂತೆ ಮರುನಾಮಕರಣ ಮಾಡಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಡಿ.ಕೆ. ‘ಸಿಎಂ’ ಕುಮಾರ್ ಎಂದು ಮರುನಾಮಕರಣ ಮಾಡಬಹುದು” ಎಂದು ನಿಖಿಲ್ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಹೊಸ ನಾಮಕರಣದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ. ಊರ ಹೆಸರು ಮರುನಾಮಕರಣವು ಬೆಳವಣಿಗೆಗೆ ಮಾಂತ್ರಿಕ ದಂಡವಾಗಿದ್ದರೆ, ಕನಕಪುರವನ್ನು ಕೌಲಲಾಂಪುರ್ ಎಂದು ಮರುನಾಮಕರಣ ಮಾಡಿ ಈಗ ಅಂತರರಾಷ್ಟ್ರೀಯ ನಗರವಾಗಿ ಪರಿವರ್ತಿಸಬಹುದಿತ್ತು, ಆದರೆ ದುಃಖಕರವೆಂದರೆ, ನಿಮ್ಮ ಹೊಸ ನಾಮಕರಣದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಮನಗರದಲ್ಲಿ ಒಂದೇ ಒಂದು ಅಭಿವೃದ್ಧಿ ಯೋಜನೆಯೂ ಆರಂಭಗೊಂಡಿಲ್ಲ. ನೀವು ರಾಜಕೀಯ ಹೋರ್ಡಿಂಗ್ಸ್ ಗಳನ್ನೇ ಮೂಲ ಸೌಕರ್ಯ ಅಂದುಕೊಂಡಂತಿದೆ. ಇದೇ ರೀತಿ ಮುಂದುವರೆದರೆ, ಮಾನ್ಯ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಡಿ.ಕೆ. ಸಿಎಂ ಕುಮಾರ್ ಎಂದು ಮರುನಾಮಕರಣ ಮಾಡಬಹುದು, ಏಕೆಂದರೆ ನಾಯಕತ್ವ ಇಲ್ಲದಿದ್ದಾಗ, ಬ್ರ್ಯಾಂಡಿಂಗ್ ಮಾತ್ರ ಪ್ರಣಾಳಿಕೆಯಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ, ರಾಮನಗರದ ನಾಮಫಲಕಕ್ಕೆ ಚಿನ್ನದ ತಗಡು ಹೊಡೆಯಲಾಗುತ್ತದೆಯೇ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸರಣಿ ಟೀಕೆಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದುರು? ಹಾಸನದಲ್ಲಿಯೇ ಏಕೆ ರಾಜಕೀಯ ಮಾಡಲಿಲ್ಲ. ಮೊದಲು ಎಚ್.ಡಿ.ಕುಮಾರಸ್ವಾಮಿ ಎನ್ನುವ ಹೆಸರಿನಲ್ಲಿರುವ ಅವರ ಊರಿನ ಹೆಸರು ಹಾಗೂ ತಂದೆಯ ಹೆಸರನ್ನು ಏಕೆ ಇನ್ನು ಇಟ್ಟುಕೊಂಡಿದ್ದಾರೆ? ಮೊದಲು ಅದನ್ನು ಬದಲಾವಣೆ ಮಾಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
